Friday, July 29, 2016

ಕಲೆ, ಸಾಹಿತ್ಯ, ಕ್ರೀಡೆ ಇತ್ಯಾದಿ ಕ್ಷೇತ್ರಗಳಲ್ಲಿ ಮೀಸಲಾತಿ ಬೇಡವೇ?


ಹಿಂದುಳಿದ ವರ್ಗ ಮತ್ತು ಪಂಗಡಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಮೀಸಲಾತಿಯು ಎಲ್ಲ ರಾಜಕೀಯ ಪಕ್ಷಗಳಿಂದ ಸ್ವೀಕೃತವಾದ ಒಂದು ರಾಷ್ಟ್ರೀಯ ನೀತಿಯಾಗಿದೆ. ಜಾತ್ಯಾಧಾರಿತ ಈ ನೀತಿಯಲ್ಲಿ ಮೀಸಲಾತಿಯ ಪ್ರಮಾಣ ಮತ್ತು ವ್ಯಾಪ್ತಿಗಳನ್ನು ಹೆಚ್ಚಿಸಬೇಕೆಂಬ ಹಾಗೂ ಒಳ ಪಂಗಡಗಳಿಗೆ ಒಳ ಮೀಸಲಾತಿ ಬೇಕೆಂಬ ಬೇಡಿಕೆ ದಿನೇ ದಿನೇ ತೀವ್ರವಾಗುತ್ತಿದೆ. ಇದಕ್ಕೆ ರಾಜಕೀಯ ಬೆಂಬಲವೂ ಸಾಕಷ್ಟಿದೆ. ಖಾಸಗಿ ಕ್ಷೇತ್ರಗಳಿಗೂ ಮೀಸಲಾತಿಯನ್ನು ಅನ್ವಯಿಸಲಾಗುವುದೆಂಬ ಹೇಳಿಕೆಗಳು ಅಧಿಕಾರಸ್ಥರಿಂದ ಬರುತ್ತಿವೆ. ಎಲ್ಲ ರೀತಿಯ ಉನ್ನತ ಶಿಕ್ಷಣದಲ್ಲಿಯೂ ಮೀಸಲಾತಿ ಅಗತ್ಯವೆಂಬ ಸತ್ಯ ಸರಕಾರಕ್ಕೆ ಈಗ ತಾನೇ ಅರಿವಾಗತೊಡಗಿದೆಯೆಂಬುದು ನಿಜವಾಗಿಯೂ ಸಂತೋಷದಾಯಕ ಸಂಗತಿ

ಹಿಂದುಳಿದ ಜನಜಾತಿಗಳ ಬಗ್ಗೆ ಇಷ್ಟೊಂದು ಅನುಕಂಪ, ಸಹಾನುಭೂತಿಗಳನ್ನು ಹೊಂದಿರುವ, ಅವರ ಏಳಿಗೆಗಾಗಿ ಅವಿಶ್ರಾಂತ ಶ್ರಮಿಸುತ್ತಿರುವ, ಸಾಮಾಜಿಕ ಸಮಾನತೆಯ ಸ್ಥಾಪನೆಗೆ ನಿರಂತರ ದುಡಿಯುತ್ತಿರುವ ನಮ್ಮ ರಾಜಕೀಯ ಮುಖಂಡರುಗಳಿಗೆ ಇತರ ಅನೇಕ ಕ್ಷೇತ್ರಗಳಲ್ಲಿಯೂ ರಿಸರ್ವೇಶನ್ ಅಥವಾ ಮೀಸಲಾತಿಯ ಆವಶ್ಯಕತೆಯ ಬಗ್ಗೆ ಜ್ಞಾನೋದಯವಾಗದಿರುವುದು ಅತ್ಯಂತ ಅಚ್ಚರಿಯ ವಿಷಯ. ಯಾವುದೇ ಕ್ಷೇತ್ರದಲ್ಲಾದರೂ, ಹಿಂದುಳಿದವರನ್ನು ಮುಂದಕ್ಕೆ ತರಬೇಕಾದರೆ ಅವರಿಗೆ ಸಮಾನ ಪ್ರಾತಿನಿಧ್ಯ ನೀಡದೆ ಸಾಧ್ಯವಿಲ್ಲ. ಹಿಂದುಳಿದವರು ಮೇಲ್ಜಾತಿಯವರೊಂದಿಗೆ ಹಾಗೂ ಮುಂದುವರಿದವರೊಂದಿಗೆ ಪೈಪೋಟಿಯಲ್ಲಿ ಜಯ ಗಳಿಸಲು ಸಾಧ್ಯವಿಲ್ಲ. ಆದುದರಿಂದ ಮೀಸಲಾತಿಯಿಲ್ಲದೆ, ಯಾವುದೇ ಕ್ಷೇತ್ರದಲ್ಲಿ ಹಿಂದುಳಿದವರನ್ನು ಮುಂದುವರಿದವರೊಂದಿಗೆ ಸಮಾನರೆಂದು ಪರಿಗಣಿಸುವುದು ಸರ್ವಥಾ ಸರಿಯಲ್ಲ.

 ಲಲಿತ ಕಲೆಗಳಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟಗಳಲ್ಲಿ ಪ್ರಶಸ್ತಿ ಗಳಿಕೆಯಲ್ಲಿ ಹಿಂದುಳಿದವರನ್ನು ಕಡೆಗಣಿಸಿಲ್ಲವೇ? ಈ ಬಗ್ಗೆ ಸರಕಾರಗಳು ಶ್ವೇತಪತ್ರ ಪ್ರಕಟಿಸಿ, ಅಂಕೆಸಂಖ್ಯೆಗಳೊಂದಿಗೆ ವಸ್ತುಸ್ಥಿತಿಯ ಮೇಲೆ ಬೆಳಕು ಚೆಲ್ಲಬೇಕು. ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಭಾರತರತ್ನ, ತಾನಸೇನ ಪ್ರಶಸ್ತಿ, ಕಾಳಿದಾಸ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ,  ಅರ್ಜುನ, ದ್ರೋಣಾಚಾರ್ಯ, ಏಕಲವ್ಯದಂತಹ ಪ್ರಶಸ್ತಿ, - ಇತ್ಯಾದಿಗಳ ವಿತರಣೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಬೇಕಿದ್ದರೆ ಮೀಸಲಾತಿ ಅತ್ಯಗತ್ಯ.

                             ***************************
 (ಇದನ್ನು  ಮೇ 10, 2006 ರಲ್ಲಿ ಬರೆದುದು.)

Thursday, July 28, 2016

ಕ್ಯಾಪ್ಟನ್ ಗೋಪಿನಾಥ್ ಆತ್ಮಕತೆ - ಬಡತನದಿಂದ ಸಿರಿತನದ ಕಡೆಗೆ - ಸಾಹಸ ರಮ್ಯ ರಸಭರಿತ ಜೀವನಗಾಥೆ

ಪುಸ್ತಕ ಪರಿಚಯ:
 SIMPLY FLY - A DECCAN ODYSSEY
                        By
CAPTAIN G. R. GOPINATH
First published in India in 2009 by HarperCollins.
Pages: 380; Price: Rs. 499
Foreword by A. P. J. Abdul Kalam



ಕಡಿಮೆ ವೆಚ್ಚದ ವಿಮಾನಯಾನದ ಕನಸನ್ನು ನೆನಸಾಗಿಸಿದ ಸಾಹಸಿ ಗೊರೂರು ರಾಮಸ್ವಾಮಿ ಗೋಪಿನಾಥ್ ಜನಿಸಿದ್ದು ಹಾಸನ ಜಿಲ್ಲೆಯ ಗೊರೂರು ಎಂಬ ಹಳ್ಳಿಯ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಶಾಲಾಶಿಕ್ಷಕನ ಎಂಟು ಮಕ್ಕಳಲ್ಲಿ ಎರಡನೆಯವನಾಗಿ 1951ರಲ್ಲಿ. ಇಂತಹ ಹಳ್ಳಿ ಶಾಲೆಯ ಕನ್ನಡದ ಹುಡುಗ ತಾನೇರಿದ ಎತ್ತರಕ್ಕೆ ಹೇಗೆ ಬೆಳೆದ ಎಂಬ ಕತೆ - ಸೋಲು ಗೆಲವುಗಳ, ಜೀವನದ ಏರಿಳಿತಗಳ, ಕಷ್ಟ ಕಾರ್ಪಣ್ಯಗಳ, ಅದ್ಭುತ ಘಟನಾವಳಿಗಳ, ಸಿನಿಮೀಯ ಸಾಹಸಗಳ ಕತೆ  ಗೋಪಿನಾಥರ ಮಾತುಗಳಲ್ಲಿ ಸೊಗಸಾಗಿ ಮೂಡಿ ಬಂದಿದೆ ಈ ಪುಸ್ತಕದಲ್ಲಿ.  ಮುನ್ನುಡಿಯಲ್ಲಿ ಅಬ್ದುಲ್ ಕಲಾಮರು ಹೇಳಿದಂತೆ ಇದು ಎಂ.ಬಿ.ಎ. ವಿದ್ಯಾರ್ಥಿಗಳು ಓದಬೇಕಾದ ಪಠ್ಯವಾಗಬೇಕು. ಇದು ಅದ್ಭುತ ರಮ್ಯ ಕಾದಂಬರಿಗಳಂತೆ ಓದುಗರನ್ನು ಹಿಡಿದಿಡುವ ಗ್ರಂಥ.

      ಒಟ್ಟು ಹತ್ತೊಂಭತ್ತು ಅಧ್ಯಾಯಗಳಲ್ಲಿ ಹೇಮಾವತಿ ನದಿ ದಂಡೆಯ ಗೊರೂರಲ್ಲಿ ಕಳೆದ ಬಾಲ್ಯದಿಂದ ತೊಡಗಿ ಸೇನಾಧಿಕಾರಿ, ಕೃಷಿಕ, ಹೈನೋದ್ಯಮಿ, ಕುಕ್ಕುಟೋದ್ಯಮಿ, ರೇಶ್ಮೆ ಕೃಷಿಕ, ಮೋಟರ್ ಸೈಕಲ್ ಡೀಲರ್, ಉಡುಪಿ ಹೋಟೆಲ್ ಉದ್ಯಮಿ, ಶೇರ್ ಬ್ರೋಕರ್, ನೀರಾವರಿ ಉಪಕರಣಗಳ ಡೀಲರ್, ಕೃಷಿ ಕನ್ಸಲ್ಟೆಂಟ್, ರಾಜಕಾರಣಿ, ಮೊದಲಾದ ಹತ್ತು ಹಲವು ಅವತಾರಗಳನ್ನು ದಾಟಿ ವಾಯುಯಾನದ ಕ್ಷೇತ್ರಕ್ಕೆ ತಲುಪಿದ,- ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಸಾಧನೆಯ, ರೋಚಕ ಕತೆಯನ್ನು ವಿವರಿಸುವ ಗೋಪಿನಾಥರ ಕಥನ ಸಾಮರ್ಥ್ಯವೂ ಓದುಗನನ್ನು ಅಚ್ಚರಿಗೊಳಿಸುತ್ತದೆ. ಸೇನೆಯಿಂದ ಸ್ವಂತ ಇಚ್ಛೆಯಿಂದ ಹೊರಬಂದಾಗ ಸಿಕ್ಕಿದ ಹಣ ಕೇವಲ ಆರು ಸಾವಿರ ರೂಪಾಯಿ. ಇಂತಹ ಅತ್ಯಲ್ಪ ಮೊತ್ತದ ಬಂಡವಾಳದೊಂದಿಗೆ ಆರಂಭಿಸಿದ ಔದ್ಯಮಿಕ ಸಾಹಸ ಗೋಪಿನಾಥರನ್ನು ವಿಮಾನವೇರುವಷ್ಟು ಎತ್ತರಕ್ಕೆ ಏರಿಸಿದ್ದಲ್ಲದೆ, ಸಾಮಾನ್ಯ ಜನರು ಕೂಡ ವಿಮಾನ ಪ್ರಯಾಣ ಮಾಡಬೇಕೆಂಬ ಕನಸನ್ನು ನೆನಸಾಗಿಸಿದ ನಿಜ ಜೀವನದ ಕತೆಯನ್ನು  ಅವರ ಮಾತುಗಳಲ್ಲೇ ಕೇಳಬೇಕೆಂದಿದ್ದರೆ ಈ ಆತ್ಮಕತೆಯನ್ನು ಓದಲೇ ಬೇಕು.

   ಪುಸ್ತಕದ ಉದ್ದಕ್ಕೂ ಅಲ್ಲಲ್ಲಿ ಸ್ವಾರಸ್ಯಕರ ಘಟನೆಗಳು, ಸರಸವಿರಸಗಳು, ಹೋರಾಟದ ಬದುಕಿನ ಮಧ್ಯೆ ಬಂದು ಹೋಗುತ್ತವೆ. ನಮ್ಮ ವಿದ್ಯಾವಂತ ಯುವಕರು ಓದಬೇಕಾದ ಪುಸ್ತಕ. ಗೋಪಿನಾಥರ ಜೀವನದ ಅನುಕರಣೆ ಸಾಧ್ಯವಿಲ್ಲ; ಮಾಡಲೂ ಬಾರದು. ಆದರೆ ಅದರಿಂದ ಕೆಲವರಾದರೂ ಪ್ರೇರಣೆ ಪಡೆಯಬಹುದು.

                                ***************************

Tuesday, July 26, 2016

ಬರೆಯಬೇಕೆಂಬಾಸೆ ಸತ್ತಿಲ್ಲ!

1912ರ ನಂತರ ಈ ಬ್ಲಾಗ್‍ನಲ್ಲಿ ನಾನು ಏನನ್ನೂ ಬರೆದಿಲ್ಲ. ಮೊದಲ ಎರಡೂ ಬರಹಗಳಲ್ಲಿ ನಾನು ಓದಿದ ಪುಸ್ತಕಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ದಾಖಲಿಸಿದ್ದೇನೆ. ಆ ಮೇಲಿನ ನಾಲ್ಕು ವರ್ಷಗಳಲ್ಲಿ ಹಲವು ಆತ್ಮಕತೆಗಳನ್ನೂ, ಕತೆ ಕಾದಂಬರಿಗಳನ್ನೂ ನೋಡಿದ್ದೇನೆ, ಓದಿದ್ದೇನೆ. ನನ್ನ ಓದಿನ ಬಹುಪಾಲು ಕನ್ನಡಕ್ಕೇ ಮೀಸಲಾಗಿದ್ದರೂ, ಇಂಗ್ಲೀಷನ್ನು ಸಂಪೂರ್ಣ ಬಿಟ್ಟಿಲ್ಲ. ದೈನಂದಿನ ಪತ್ರಿಕೆ, ವಾರ ಪತ್ರಿಕೆ, ಮಾಸಪತ್ರಿಕೆ (ಕನ್ನಡ ಮತ್ತು ಇಂಗ್ಲಿಷ್ - ಎರಡೂ ಭಾಷೆಗಳಲ್ಲಿ)ಗಳೇ ಹೆಚ್ಚಿನ ಸಮಯವನ್ನು ಕಬಳಿಸಿದರೂ, ಅವುಗಳಿಂದಲೇ ಸಂಪೂರ್ಣ ತೃಪ್ತನಾಗುವುದಿಲ್ಲ. ಇಷ್ಟಲ್ಲದೆ ಅಂತರ್ಜಾಲದಲ್ಲಿ ಜಾಲಾಡುವ ಹವ್ಯಾಸವೊ, ಅಭ್ಯಾಸವೊ, ಚಟವೊ- ಅದು ಕೂಡಾ ಅಂಟಿಕೊಂಡಿರುವುದರಿಂದ, ಆ ಬ್ರಹ್ಮಾಂಡದ ಒಳಸೇರಿದರೆ ಬೇಗನೇ ಹೊರಬರಲಾಗುವುದಿಲ್ಲ. ಆಲ್ಲಿಯೂ ಸಾಕಷ್ಟು ಮೇವು ಸಿಗುತ್ತದೆ. ಕನ್ನಡದಲ್ಲಿಯೂ ಹಲವು ಉತ್ತಮ ಬ್ಲಾಗ್‍ಗಳಿವೆ; ಯುವ ಬರಹಗಾರರಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಓದಿದ ಪುಸ್ತಕಗಳ ಬಗ್ಗೆ ಯಾವುದೇ ಟಿಪ್ಪಣಿ ಮಾಡಿಕೊಂಡಿರುವುದಿಲ್ಲ. ಆದುದರಿಂದ ಆ ಪುಸ್ತಕಗಳ ಬಗ್ಗೆ ಸಂಕ್ಷಿಪ್ತವಾಗಿ ಮುಂದಿನ ದಿನಗಳಲ್ಲಿ ಬರೆಯುತ್ತೇನೆ.